Monday 21 October 2013

ಡಾ.ಕಾಟ್ಕರ್ ಕೃತಿ ಸಿನಿಮಾ..

ಡಾ ಸರಜೂ ಕಾಟ್ಕರ್ ಕಾದಂಬರಿ ಆಧಾರಿತ ‘ಇಂಗಳೆ ಮಾರ್ಗ’ ಚಲನ ಚಿತ್ರ ಚಿತ್ರೀಕರಣ ಆರಂಭ

ಡಾ ಪ್ರಕಾಶ ಗ ಖಾಡೆ
ಕನ್ನಡದ ಹೆಸರಾಂತ ಬರಹಗಾರ ಡಾ.ಸರಜೂ ಕಾಟ್ಕರ್ ಅವರ ‘ದೇವರಾಯ’ ಕಾದಂಬರಿ ‘ಇಂಗಳೆ ಮಾರ್ಗ’ ಹೆಸರಿನಲ್ಲಿ ಚಲನಚಿತ್ರವಾಗಿ ಮೂಡಿ ಬರಲಿದೆ. ಚಿತ್ರೀಕರಣವು ಬೆಳಗಾವಿಯಲ್ಲಿ ಅಕ್ಟೋಬರ್ 10 ರಂದು ಆರಂಭವಾಯಿತು.ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ದೇವರಾಯ ಇಂಗಳೆಯವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲಿ ದಲಿತ ಕ್ರಾಂತಿಯ ನೇತಾರರಾಗಿ ಗುರುತಿಸಿಕೊಂಡವರು.ಸುಮಾರು 20 ವರ್ಷಗಳ ಹಿಂದೆ ಡಾ.ಸರಜೂ ಅವರು ಬರೆದ ಈ ಕಾದಂಬರಿಯಲ್ಲಿ ದೇವರಾಯ ಇಂಗಳೆ ಅವರು ಅಸ್ಪೃಶ್ಯತೆ,ದೇವದಾಸಿ ಅನಿಷ್ಟ ಪದ್ದತಿ,ದೀನ ದಲಿತರ ಮೇಲಾಗುತ್ತಿರುವ ಅನ್ಯಾಯ ವಿರುದ್ದ ಹೋರಾಡಿದ ಕಥನವನ್ನು ಕಂಡರಿಸಿದ್ದಾರೆ.ದಲಿತರ ಪರ ಹೋರಾಟ ಮಾಡಿದ ದೇವರಾಯ ಅವರ ಬದುಕು ಇತಿಹಾಸದಲ್ಲಿ ದಾಖಲಾಗಬೇಕು ಎಂಬ ಉತ್ಕಟ ಕಳಕಳಿಯಿಂದ ಬಾಗಲಕೋಟೆಯ ವಿಕಲಚೇತನ ಮುಖಂಡ ಘನಶ್ಯಾಮ ಭಾಂಡಗೆ ಅವರು ತಮ್ಮ ವೈಷ್ಣೋದೇವಿ ಕ್ರಿಯೇಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ.
ಘನಶ್ಯಾಮ ಭಾಂಡಗೆ ಅವರು ಸಾಹಸಿ ಯುವಕ.ತಮ್ಮ ಅಂಗವೈಕಲ್ಯವನ್ನು ಮಟ್ಟಿ ನಿಂತವರು.ಹೋರಾಟ ಪ್ರಜ್ಞೆಯ ಮೂಲಕ ಬದುಕು ಕಟ್ಟಿಕೊಂಡವರು. ವಿದ್ಯಾರ್ಥಿ ದೆಸೆಯಲ್ಲಿಯೇ ಕೈಯಿಂದ ತಿರುಗುವ ಸೈಕಲ್ಲ ಮೇಲೆ ದೇಶ ಸುತ್ತಿ ಬಂದವರು.ಅಂತರಾಷ್ಟ್ರೀಯ ಕ್ರೀಡಾ ಪಟುವಾಗಿ ಗುರುತಿಸಿಕೊಂಡು ವಿದೇಶಗಳಿಗೆ ತೆರಳಿ ಪದಕ ತಂದವರು.ಸಾವಿರಾರು ವಿಕಲಚೇತನರಿಗೆ ಅನ್ನಕ್ಕೆ ಹಚ್ಚಿದವರು. ಈಗ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಭಾಂಡಗೆ ಅವರು ‘ಹಣ ಮಾಡಲು ಸಿನಿಮಾ ಮಾಡುತ್ತಿಲ್ಲ ,ದಲಿತ ಹೋರಾಟಗಾರನ ಬದುಕು ಸಮಾಜಕ್ಕೆ ಸಂದೇಶವಾಗಬೇಕೆಂದು ಚಿತ್ರ ನಿರ್ಮಿಸುತ್ತಿದ್ದೇನೆ’ ಎನ್ನುತ್ತಾರೆ.
ವಿಶಾಲರಾಜ ಅವರ ನಿರ್ದೇಶನದ ಚಿತ್ರದಲ್ಲಿ ಸುಚೀಂದ್ರ ಪ್ರಸಾದ ನಾಯಕರಾಗಿದ್ದಾರೆ. ಸಾಯಿಬಾಬಾ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ ಬಾಗಲಕೋಟೆಯ ಶಿವಾನಿ ಭೋಸಲೆ ಮೊದಲಬಾರಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಶಂಕರ ಅಶ್ವಥ್,ಕೆ.ಎಸ್.ಶ್ರೀಧರ,ರಮೇಶ ಪಂಡಿತ ತಾರಾಗಣದಲ್ಲಿದ್ದಾರೆ.ಹಳೆಯ ಕಾಲದ ವಾದ್ಯಗಳನ್ನು ಬಳಸಿ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ ನಾಲ್ಕು ಹಾಡುಗಳನ್ನು ರೂಪಿಸಿದ್ದಾರೆ. ಸಾಹಿತಿಗಳಾದ ಸುರೇಶ ಕುಲಕರ್ಣಿ ಅವರು ಸಾಹಿತ್ಯ, ಶಿರೀಷ ಜೋಶಿ ಸಂಭಾಷಣೆ ರಚಿಸಿದ್ದಾರೆ. ಬೆಳಗಾವಿ, ಚಿಕ್ಕಮಗಳೂರು, ಬಾಗಲಕೋಟೆ, ಪುಣೆ ಮೊದಲಾದ ಕಡೆಗೆ ಚಿತ್ರೀಕರಣ ನಡೆಯಲಿದೆ ಎಂದು ತಂಡ ತಿಳಿಸಿದೆ. ತುಂಬಾ ಕುತೂಹಲ ಮೂಡಿಸಿರುವ ಡಾ.ಕಾಟ್ಕರ್ ಅವರ ಕಾದಂಬರಿ ಆಧಾರಿತ ‘ಇಂಗಳೆ ಮಾರ್ಗ’ ಬೇಗ ಬೆಳ್ಳಿ ತೆರೆಗೆ ಮೂಡಿಬರಲಿ .
ಚಿತ್ರದ ಕೆಲವು ದೃಶ್ಯಗಳು :

No comments:

Post a Comment