Monday 29 July 2013

ಹನಿಗವಿತೆಗಳು : ಡಾ.ಪ್ರಕಾಶ ಗ.ಖಾಡೆ

                                                       ಹನಿಗವಿತೆಗಳು :

                                                                        ಡಾ.ಪ್ರಕಾಶ ಗ.ಖಾಡೆ

ಬಯಲಾದ ಭಾವಕೆ
ಕಣ್ಣ ಹನಿ
ಬಯಲಾದ ಜೀವಕೆ
ಕಣ್ವ ಮುನಿ.


***

ಮಾತು
ಕೃತಿ
ಮೌನ
ಆಕೃತಿ.


***

ಬೆಳ್ಳಗಿರುವುದೆಲ್ಲ ಹಾಲಲ್ಲ
ಎನ್ನುತ್ತಾರೆ ; ಅದು ಖರೇ
ಕಪ್ಪಗಿರುವುದೂ ಕತ್ತಲಲ್ಲ
ಬೆಳಕಿನ ಬಸಿರು.


***


ಕವಿತೆ 
------
ಭಾವನೆಗಳ
ಮೊಟ್ಟೆಗೆ
ಕಾವು ಕೊಟ್ಟ
ಮೌನ.

***

ಬೀದಿಯಲ್ಲಿ ಬಿದ್ದ ಮರ
ಬದಿಯಲ್ಲಿ ಎದ್ದ ಸಸಿ
ಎರಡಕ್ಕೂ ಒಂದೇ ಹೆಸರು
ಸಾರ್ಥಕತೆ.


***


ಹರಿವ ಮನಸ್ಸು 
ಕಟ್ಟಿಡಲು ಒಂದು ಸಣ್ಣ
ಎಳೆ ಸಾಕು.
ಈ ಎಳೆ ದಕ್ಕುವುದು
ಒಂದು ಏಕಾಂತದ
ಧ್ಯಾನದಲ್ಲಿ.


***
ಭಾವನೆಗಳು
ಬರೀ ಆಡಲು ಅಲ್ಲ ;
ಹಂಚಿಕೊಳ್ಳಲು ಮತ್ತು 
ಒಂದಿಷ್ಟು ಬೆಚ್ಚಗೆ
ಪುಟ್ಟ ಹೃದಯದಲ್ಲಿ
ಬಚ್ಚಿಟ್ಟುಕೊಳ್ಲಲು.


***


ಹೋರಾಟ
ಪ್ರತಿಭಟಣೆಗೆ ಒಂದು
ಸಣ್ಣ ಉದಾಹರಣೆ ;
ಕಾಗೆ ಗೂಡಲಿ ಬೆಳೆವ
ಮರಿ ಕೋಗಿಲೆಯ
ಬೆಳವಣಿಗೆ.


***ಕೊರಡಲ್ಲಿ
ಜೀವ ಪಡೆದ ಶಿಲ್ಪ
ಅದರ ಹುಟ್ಟಿನ
ಚಿಗುರ ಮರೆಸುತ್ತದೆ.

***

ಈ ಮುಂಜಾವು
ತೆರೆದುಕೊಳ್ಳುತ್ತದೆ.

ನಡು ಹಗಲು
ದೂರ ನಡೆಸುತ್ತದೆ.

ರಾತ್ರಿ ಬೆಚ್ಚಗೆ
ಅಪ್ಪಿಕೊಳ್ಳುತ್ತದೆ.

***


ನೆನಪುಗಳು
ಆಗೀಗ ಮರುಜನ್ಮ ಪಡೆದು
ಮತ್ತೆ ಮತ್ತೆ ಹುಟ್ಟುತ್ತವೆ
ಸಾವನ್ನು ಮರೆಸುತ್ತ
ಬದುಕನ್ನು ಬಯಲುಗೊಳಿಸುತ್ತ
ಇದ್ದಂತೆ ಇದ್ದು
ಇಲ್ಲದಾಗುತ್ತವೆ
- ಡಾ.ಪ್ರಕಾಶ ಗ. ಖಾಡೆ




ಕವಿತೆ : ಪ್ರಕಾಶ ಗ.ಖಾಡೆ

ನನ್ನೊಳಗೆ ಎಲ್ಲರೂ
==========
ಇವರು ಬದುಕಿನ ಬೀದಿಯಲ್ಲಿ
ನನ್ನೊಳಗೆ ದೀಪವಾಗಿ ಬೆಳಕ ಹರಿಸುತ್ತಾರೆ.
ಮತ್ತೆ ಅದೇಕೋ ಕತ್ತಲಾಗಿ
ಕಣ್ಣುಗಳಿಗೆ ಕಪ್ಪ ಬಳಿಯುತ್ತಾರೆ.

ಕೆಲವರು ಆಡಿಕೊಳ್ಳುತ್ತಾರೆ 
ಹೃದಯಕೆ ಕಾಯ್ದ ಕಬ್ಬಿಣದ ಬರೆ ಎಳೆದು
ಬೇಕಂತಲೆ ಕಾಲು ಕೆದರುತ್ತಾರೆ 
ಜೀರ್ಣವಾಗದ ಅನ್ನ ತಿಂದು.

ಬೆಳೆದ ಪೈರನು ದಕ್ಕಿಸಿಕೊಳ್ಳಲು
ಆಸೆಗಳ ಬಿತ್ತುತ್ತಾರೆ
ಹರಿವ ತೊರೆಗೆ ಗೋಡೆ ಕಟ್ಟಿ
ಹೃದಯವನ್ನು ಬರಡಾಗಿಸುತ್ತಾರೆ.

ಕೆಲವರು ಕನಸಾಗುತ್ತಾರೆ
ಹೃದಯದಲ್ಲಿ ರಂಗೋಲಿ ಬಿಡಿಸಿ ;
ಮತ್ತವರೆ ನೋವಾಗುತ್ತಾರೆ
ಕನಸುಗಳ ಚೆಲ್ಲಾಪಿಲ್ಲಿಗೊಳಿಸಿ.

ಕೆಲವರು ಮನದ ತಿಳಿನೀರಿನಲ್ಲಿ
ಗಾಳ ಹಾಕುತ್ತಾರೆ
ಬಲಿ ಬೀಳದಿದ್ದರೆ
ರಾಡಿ ಮಾಡುತ್ತಾರೆ

ಕೆಲವರು ಮನಸ್ತಾಪದಲ್ಲಿ
ಮಾತುಗಳಿಗೆ ಕೀಲಿ ಜಡಿಯುತ್ತಾರೆ
ಅವರದೇ ಗುಂಗು ಹಿಡಿಸಿ
ಹತ್ತಿರವಿದ್ದೂ ದೂರವಾಗುತ್ತಾರೆ.
(1997)
-ಡಾ.ಪ್ರಕಾಶ ಗ.ಖಾಡೆ

Thursday 18 July 2013

ವಿಶೇಷ ಲೇಖನ :
 
                     ಆನಂದಕಂದರ ಕಾವ್ಯ :
                    ಜನಪದ ಗೀತೆಗಳ ಪುನರುಜ್ಜೀವನ

                                                              -ಡಾ.ಪ್ರಕಾಶ ಗ.ಖಾಡೆ

           (ಆನಂದ ಕಂದ ಕಾವ್ಯನಾಮದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯದ ಅಧ್ಯಯನ)

ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲ ಒಬ್ಬರಾಗಿರುವ ಆನಂದಕಂದ ಅವರದು ಶುದ್ಧ ಜನಪದ ಶೈಲಿ. ಇದ್ದುದನ್ನು ಇದ್ದ ಹಾಗೆ, ಸಹಜತೆಗೆ ಕೆಡಕು ತಾಗದಂತೆ ಮೂಲರೂಪಕ್ಕೆ ಮತ್ತಷ್ಟು ಜೀವ ತುಂಬಿ ಚಿತ್ರಿತವಾಗಿರುವ ಅವರ ಜಾನಪದ ಪ್ರಭಾವಿತ ಕವಿತೆಗಳು ನಾಡವರ ನಾಲಿಗೆಯ ಮೇಲೆ ನಲಿದು ಜನಪ್ರಿಯವಾದವು. ಆನಂದಕಂದರ  ಜನಪದ ರೀತಿಯ ಕವಿತೆಗಳು ಜಾನಪದವೇ ಎನ್ನುವಷ್ಟು ಜನಾನುರಾಗಿಯಾಗಿವೆ. ಈ ಜನಪ್ರಿಯತೆಗೆ ಮುಖ್ಯಕಾರಣ ಜಾನಪದದ ಧಾಟಿ ಆದರೂ ಆ ಕಾಲಕ್ಕೆ ಆನಂದ ಕಂದರ ಗೀತೆಗಳನ್ನು ಹಾಡಿ ಖ್ಯಾತಿ ಪಡೆದ ‘ಸಾವಿರ ಹಾಡಿನ ಸರದಾರ’ರೆನಿಸಿದ ಹುಕ್ಕೇರಿ ಬಾಳಪ್ಪನವರೂ ಒಂದು   ಕಾರಣ. ಜನಪದ ಹಾಡುಗಾರ ಹುಕ್ಕೇರಿ ಬಾಳಪ್ಪನವರು ಆನಂದಕಂದರ ಹಲವಾರು ಕವನಗಳನ್ನು ಅವಿಸ್ಮರಣೀಯವೆಂಬಂತೆ ರಸಪೂರ್ಣವಾಗಿ ಹಾಡಿ ತೋರಿಸಿದ್ದಾರೆ.
    ‘ಆನಂದಕಂದ’ ಕಾವ್ಯನಾಮದ ಬೆಟಗೇರಿ ಕೃಷ್ಣಶರ್ಮ ಅವರ ಜಾನಪದ ಆಸಕ್ತಿಗೆ ಮೂಲಕಾರಣ ಅವರು ಬೆಳೆದ ಪರಿಸರ ಮತ್ತು ತಾಯಿಯ ಪ್ರಭಾವ. 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದ ಬೆಟಗೇರಿ ಕೃಷ್ಣಶರ್ಮರು. ಮನೆಯಲ್ಲಿಯ ಹಬ್ಬ-ಹÀರಿದಿನಗಳ ಆಚರಣೆ, ಪುರಾಣ ಪುಣ್ಯ ಕಥೆಗಳ ಶ್ರವಣ. ಜಾನಪದದ ನಿಕಟ ಸಂಪರ್ಕ ಅವರಿಗೆ ದಕ್ಕಿತು. ಈ ಪ್ರಭಾವದ ಕುರಿತು ಆನಂದಕಂದರು ‘ನನ್ನ ಸಾಹಿತ್ಯ ಕೃಷಿಯ ಸಾರ ಸತ್ತ್ವ’ (1960) ಎಂಬ ಲೇಖನದಲ್ಲಿ ಹೀಗೆ ಹೇಳುತ್ತಾರೆ.
“ನಮ್ಮ ಹಳ್ಳಿಯ ರೈತರು ನಮ್ಮ ತಾಯಿಯ  ಗುಣಗಳನ್ನು ಮನವರಿಕೆ ಮಾಡಿಕೊಂಡಿದ್ದರು. ಮಹತ್ವದ ಕಾರ್ಯಗಳಿಗೆ  ಪಯಣ ಹೊರಟಾಗ, ನಮ್ಮ ತಾಯಿಯಿಂದ ಹರಕೆ ಪಡೆಯಲು ಬರುತ್ತಿದ್ದರು. ಹೊಲಗಳಿಗೆ ಕೂರಿಗೆ ಸಾಗಿಸುವಾಗ, ಬೀಜಗಳಿಗೆ ಆಕೆಯ ಕೈಯನ್ನು ಮುಟ್ಟಿಸಿಕೊಂಡು ಹೋಗುತ್ತಿದ್ದರು. ಬೆಳಗಿನ ಐದು ಗಂಟೆಗೆ ಎದ್ದು ಮನೆಗೆಲಸ ಮಾಡುತ್ತ ಮೆಲುದನಿಯಲ್ಲಿಯೇ ಹಾಡುಗಳನ್ನು ಗುಣಗುಣಿಸುತ್ತಿದ್ದಳು. ಶ್ರೀಕೃಷ್ಣನ ಬಾಲಲೀಲೆಗೆ ಸಂಬಂದಿsಸಿದ ಕೆಲವು ಸಾಂಗತ್ಯಗೀತ, ಲಾವಣಿಗಳನ್ನು ಆಕೆ ಹೇಳುತ್ತಿದ್ದಳು. ತುಂಬ ಸೊಗಸಾದ ಹಾಡುಗಳವು ಆಕೆಯೊಂದಿಗೆ ಅವೂ ಹೋಗಿ ಬಿಟ್ಟವು.” ಎಂದು ನೊಂದಿದ್ದಾರೆ.
“ಮನೆಯಲ್ಲಿ ತುಂಬಿದ ಬಳಗ, ಮದುವೆ, ಮುಂಜಿ, ಶೋಭನ, ಸೀಮಂತ, ಬಸಿರು, ಬಾಣಂತಿತನ, ಹುಟ್ಟಿದ ಹಬ್ಬ, ನಾಮಕರಣ, ಜವುಳ ಇವೆಲ್ಲ ಆಗಾಗ ನಡದೇ ಇರುವವು. ಈ ಸಂಪ್ರದಾಯಗಳೂ ನನ್ನ ಮನಸಂಸ್ಕಾರಕ್ಕೆ ಕಾರಣವಾದವು” ಎಂಬುದನ್ನು ಬೆಟಗೇರಿ ಅವರು ಜ್ಞಾಪಿಸಿಕೊಳ್ಳುತ್ತಾರೆ. ಜತೆಗೆ ಅವರು ಹುಟ್ಟಿ ಬೆಳೆದ ಪರಿಸರವಂತೂ ಜಾನಪದದ ರಸಘಟ್ಟಿಯಾದುದು. ಆ ಕಾಲದ ಲಾವಣಿ, ಬಯಲಾಟಗಳು ಅವರನ್ನು ತೀವ್ರವಾಗಿ ಸೆಳೆದುಕೊಂಡಿವೆ. “ಹಳ್ಳಿಯ ಏಕನಾದದಂತಹ ಬಾಳಿನಲ್ಲಿ ವೈವಿಧ್ಯ ತಂದುಕೊಳ್ಳುವು ದಕ್ಕಾಗಿ ಹಳ್ಳಿಯ ರೈತರು ಸಾರ್ವಜನಿಕವಾಗಿ ಗೊಂದಲಿಗರಿಂದಲೂ, ಎಲ್ಲಮ್ಮನ ಜೋಗಿಯವರಿಂದಲೂ ಕಥೆಗಳನ್ನು ಹೇಳಿಸುವರು. ಕಿಳ್ಳಿಕೇತರ ಗೊಂಬೆಯ ನೆರಳಾಟಗಳನ್ನಾಡಿಸುವರು. ಹಲಿಗೆ, ಕರಡಿ ಮಜಲುಗಳನ್ನು ಮಾಡಿಸಿ, ಲಾವಣಿಕಾರರಿಂದ ಲಾವಣಿ ಪದಗಳನ್ನು ಹೇಳಿಸುವರು. ಕೃಷ್ಣಪಾರಿಜಾತ, ರಾಧಾನಾಟ, ರೂಪಸಿಂಗ ಸಂಗ್ಯಾಬಾಳ್ಯಾ ಮೊದಲಾದ ಬಯಲಾಟಗಳನ್ನು ಆಡಿಸುವರು. ನನ್ನ ಚಿಕ್ಕತನದಲ್ಲಿ ನನಗೆ ದೊರೆತ ಇಂತಹ ಸಂದರ್ಭಗಳನ್ನು ಒಮ್ಮೆಯೂ ಕಳೆದುಕೊಂಡಂತೆ ನನಗೆ ಜ್ಞಾಪಕವಿಲ್ಲ” ಎನ್ನುವಲ್ಲಿ ಆನಂದಕಂದರು ತಮ್ಮ ಕಾಲದ ಜಾನಪದ ಪರಿಸರವನ್ನು ತುಂಬಾ  ಗಾಢವಾಗಿ ಪ್ರಭಾವಿಸಿಕೊಂಡ ಹಿನ್ನೆಲೆ ಸ್ಪಷ್ಟವಾಗುತ್ತದೆ.
ಆನಂದಕಂದರು ಕಳೆದ ಶತಮಾನದ ಇಪ್ಪತ್ತನೆಯ ದಶಕವು ಭಾರತವು ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಕಾಲದಲ್ಲಿ ರಾಷ್ಟ್ರೀಯತೆಗೆ ಆಕರ್ಷಿತರಾದರು. ರಾಷ್ಟ್ರೀಯತೆಯ ಜಾಗ್ರತೆಗೆ ಪೋಷಕವಾಗುವ ಅನೇಕ ಹಾಡುಗಳನ್ನು ಈ ಅವದಿsಯಲ್ಲಿ ರಚಿಸಿದರು. ರಾಷ್ಟ್ರೀಯ ಪದ್ಯಾವಲಿ(1921), ಗಾಂಧಿ ಗೀತ ಸಪ್ತಕ (1921) ರಾಷ್ಟ್ರೀಯ ಪದ್ಯಮಾಲೆ(1921)ಯ ಹಾಡುಗಳು ಭಾವ ತೀವ್ರತೆ ಮತ್ತು ಗೇಯತೆಯಿಂದೊಡಗೂಡಿ ಜನತೆಯಲ್ಲಿ ದೇಶಾಬಿsಮಾನದ ಪ್ರಜ್ವಲಿಸುವಂತೆ ಮಾಡಿದವು. ಮುಖ್ಯವಾಗಿ ಈ ಹಾಡುಗಳು ಹೆಜ್ಜೆ ಹಾಕುತ್ತ ತಾಳಮೇಳದೊಂದಿಗೆ ಹಾಡುತ್ತ ಪಥ ಸಂಚಲನ ಮಾಡಲು ತುಂಬಾ ಹೊಂದುತ್ತಿದ್ದವು. ಈ ಕಾರಣವಾಗಿ ಈ ಹಾಡುಗಳನ್ನು “ಹೆಜ್ಜೆಯ ಹಾಡು”ಗಳೆಂದು ಕರೆಯುತ್ತಿದ್ದರು.
1938ರಲ್ಲಿ ಆರಂಬಿsಸಿದ ‘ಜಯಂತಿ’ಯಲ್ಲಿ ಮೊದಲ ಪುಟದಲ್ಲಿ ಪ್ರಕಟವಾಗುತ್ತಿದ್ದ ಆನಂದಕಂದರ ಕವಿತೆಗಳು ಜಾನಪದವನ್ನೇ ಹೆಚ್ಚಾಗಿ ಪ್ರಭಾವಿಸಿಕೊಂಡಿವೆ. ನವೋದಯ ಕಾವ್ಯದ ಆರಂಭದಿಂದಲೂ ಕಾವ್ಯ ಕೃಷಿಗೆ ತೊಡಗಿದ ಅವರ ರಚನೆಗಳು ಜನಪದರ ಬದುಕನ್ನೇ ಚಿತ್ರಿಸಿವೆ. ಜಯಂತಿಯ ಮೊದಲ ಸಂಚಿಕೆ (ಮೇ 1938)ಯಲ್ಲಿ ‘ನಡೆಸಾಗು ಜೊತೆಗೂಡಿ’, ಜುಲೈ 1938ರ ಸಂಚಿಕೆ 3ರ ‘ನೋಡು, ಬರುವ ಸುಗ್ಗಿಯಾಟ’, ಆಗಸ್ಟ್ 1938 ರ ಸಂಚಿಕೆ 4 ರ ‘ನಾಗರ ಪಂಚಮಿ’ ಗೀತೆಗಳು ಹಳ್ಳಿಗರ ಬದುಕಿನ ಸಂದರ್ಭ ವನ್ನು ಚಿತ್ರಿಸಿವೆ.

ಆನಂದಕಂದ ಅವರ ಹದಿಮೂರು ಕವನ ಸಂಕಲನಗಳಲ್ಲಿ ಮುಖ್ಯವಾಗಿ ‘ನಲ್ವಾಡುಗಳು’ ಸಂಕಲನ ಜಾನಪದದ ಪರಿಪೂರ್ಣ ಸೊಗಡಿನಿಂದ ಕೂಡಿದೆ. ಉಳಿದ ಮುದ್ದನಮಾತು(1926), ಅರುಣೋದಯ (1926), ಕಾರ ಹುಣ್ಣಿಮೆ(1956) ವಿರಹಿಣಿ(1956). ಒಡನಾಡಿ(1956) ಮೊದಲಾದ ಸಂಕಲನಗಳಲ್ಲಿ ಜಾನಪದ ರೂಪ, ಶೈಲಿ, ವಸ್ತು ಒಳಗೊಂಡಿವೆ.
ಹಳ್ಳಿಗರ ಹಾಡುಗಳು :
   ಬೆಟಗೇರಿ ಕೃಷ್ಣಶರ್ಮ ಅವರು ಜಾನಪದ ಕಾರ್ಯವನ್ನು 1929 ರಲ್ಲಿ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ತ್ರಿಪದಿಗಳನ್ನು ಹಾಡುವುದರೊಂದಿಗೆ ಆರಂಭ ಮಾಡಿದರು. ಅವುಗಳ ಸೊಬಗು ಸೌಂದರ್ಯದ ಜೊತೆಗೆ ಜಾನಪದದ ಶಕ್ತಿ ಸಾಮಥ್ರ್ಯವನ್ನು ಎತ್ತಿ ತೋರಿದರು.  ‘ಹಳ್ಳಿಯ ಹಾಡುಗಳು’ ಜಾನಪದವನ್ನು ಹೆಚ್ಚು ಪ್ರಸಿದ್ಧಿಗೆ ತರಲು ಸಹಾಯಕಾರಿಯಾಯಿತು. 1922ರಲ್ಲಿ ಬೆಟಗೇರಿಯವರು ಸಂಗ್ರಹಿಸಿದ ‘ಕೆರೆಗೆ ಹಾರ’ ಜನಪದ ಗೀತೆಯು ಅವರಿಗೆ ಹೆಸರು ಹಾಗೂ ಕೀರ್ತಿ ತಂದಿತು.
‘ಕೆರೆಗೆ ಹಾರ’ ವನ್ನು 1925 ರಿಂದ ತಮ್ಮ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ವಿವರಿಸಿ, ಧಾಟಿ ಹಾಗೂ ಭಾವಪೂರ್ಣವಾಗಿ ಹಾಡಿ ತೋರಿಸುತ್ತಿದ್ದರು. ಈ ಹಾಡು ಕೋಲು ಪದದಲ್ಲಿ ಹೆಣೆದುಕೊಂಡಿದೆ. “ಸವದತ್ತಿ ತಾಲ್ಲೂಕಿನ ಊರಾಗಿರುವ ಯರಗಟ್ಟಿಯ ಹೂಗಾರ ಮನೆತನದ ಹೆಣ್ಣು ಮಗಳನ್ನು ಶ್ರೀ ಕೃಷ್ಣಶರ್ಮರ ಹುಟ್ಟೂರಾದ ಬೆಟಗೇರಿಯಲ್ಲಿರುವ ಹೂಗಾರ ಮನೆತನದ ಕಲ್ಲಯ್ಯ ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದರು. ಹಬ್ಬ ಹುಣ್ಣಿವೆಗಳ ರಾತ್ರಿಗಳಲ್ಲಿ ಹೆಣ್ಣು ಮಕ್ಕಳ ಹಾಡುಗಳು ನಡೆಯುತ್ತಿದ್ದವು. ಕೃಷ್ಣಶರ್ಮರು ಗುಂಪಿನಲ್ಲಿ ಕುಳಿತು ಕೇಳಿ ಕಂಠಪಾಠ ಮಾಡಿ ಬರೆದು ಬಳಿಕ ತಮ್ಮ ಮನೆಗೆ ಕರೆಯಿಸಿ ಮತ್ತೆ  ಹಾಡಿಸಿ, ಸರಿಯಾಗಿ ನೋಡಿ, ಸಂಗ್ರಹಿಸಿದರು. ಈ ಹಾಡು ಬೆಟಗೇರಿ ಅವರಿಗೆ ಜಾನಪದ ಶೈಲಿಯನ್ನೇ ಕಲಿಸಿತು.” ಎನ್ನುತ್ತಾರೆ ಡಾ.ನಿಂಗಣ್ಣ ಸಣ್ಣಕ್ಕಿಯವರು.
ನಲ್ವಾಡುಗಳು :
ಆನಂದಕಂದರ ‘ನಲ್ವಾಡುಗಳು’ ಆಡುನುಡಿಯ ಸಹಜ ರೂಪಕತೆಯಿಂದ ಕಾವ್ಯವನ್ನು ಸರಳಗೊಳಿಸುತ್ತ ಜನಸಾಮಾನ್ಯರ ನಾಲುಗೆಯ ಮೇಲೂ ನಲಿಯುವಂತೆ ಮಾಡಿವೆ. ‘ನಲ್ವಾಡುಗಳು’ ಸಂಕಲನವು ಇಪ್ಪತ್ತೇರಡು ಪ್ರೀತಿ ಗೀತೆಗಳನ್ನುಜಾನಪದದಲ್ಲಿ ರೂಪಿಸಿದ ಸಂಕಲನ. ಇಲ್ಲಿ ಬೆಟಗೇರಿ ಅವರು ಅಪ್ಪಟ ಜನಪದ ಕವಿಯಂತೆ ಕಾಣುತ್ತಾರೆ. ಶುದ್ದ ಜಾನಪದಕ್ಕೆ ಇವರ ಕವಿತೆಗಳು ಪ್ರಧಾನವಾಗಿ ತೋರುತ್ತವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದದ ವಿವಿಧ ಲಯಗಳೆಲ್ಲವನ್ನೂ ಯಶಸ್ವಿಯಾಗಿ ‘ನಲ್ವಾಡುಗಳು’ ಸಂಕಲನ ಕವಿತೆಗಳಲ್ಲಿ ತಂದಿದ್ದಾರೆ.
ಗೋದಿ ಬೀಜಕ್ಕಂತ ಗೋಕಾಂವಿಗ್ಹೋಗಿದ್ದೆ
ಸಾದಗಪ್ಪಿನ ಸವಿಹೆಣ್ಣ
ಸಾದಗಪ್ಪಿನ  ಸವಿಹೆಣ್ಣ ನೋಡುತಲೆ
ಗೋದಿ ಬಿತ್ತಿಗಿಯ ಮರತೆನೊ
ಜನಪದ ತ್ರಿಪದಿಗಳಲ್ಲಿ ಕಂಡು ಬರುವ  ಶೈಲಿ, ರೂಪ, ವಸ್ತು ಬೆಟಗೇರಿ ಅವರ ಕವಿತೆಗಳಲ್ಲಿ ಸ್ಥಾನ ಪಡೆದಿವೆ. ‘ನಲ್ವಾಡುಗಳು’ ಸಂಕಲನದ’ ನಮ್ಮೂರ ಜಾತ್ರಿ ಬಲು  ಜೋರಾ, ಬೆಣ್ಣಿಯಾಕಿ, ಬುತ್ತಿ ತೂಗೊಂಡು ಹೋಗ್ತಿನಿ ಹೊಲಕ, ಯಾರೋ ಏನೋ ಬರತಾರಂತ, ಹಿಂಗ್ಯಾಕ ನೋಡತಾನ, ಚಿನ್ನತ್ತಿಯ ಮಗ, ಬಡವರ  ಮಗಳು, ಗೌಡರ ಮನೆ ಸೊಸಿ, ಗೆಣತಿ, ಏನ ಮಾಡ ಅಂತೀ, ಬೆಳವಲ ಒಕ್ಕಲತಿ ಮೊದಲಾದ ಕವಿತೆಗಳು ಹೆಸರೇ ಸೂಚಿಸುವಂತೆ ಜನಪದ ಸಂಸ್ಕøತಿಗೆ ಸೇರಿದ್ದು, ಅಲ್ಲಿನ ವಸ್ತು, ಲಯ, ಸೊಗಸು ಸೌಂದರ್ಯಗಳನ್ನು ಪಡೆದುಕೊಂಡಿದೆ ಎನ್ನುವುದಕ್ಕಿಂತ ಜಾನಪದವೇ ಆಗಿದೆ ಎಂದು ಗುರುತಿಸಲು ಸಾಧ್ಯ.
      ಗರಡಿಯ ಹುಡುಗರ ಹುರುಪು ಅದೇನ
      ಕರಡಿ - ಹಲಿಗಿ ಮಜಲಿನ ಮೋಜೇನ
      ಬಯಲಾಟದ ಸುಖಕಿಲ್ಲ ಸಮಾನ
ಕೇಳಿಲ್ಲೇನು ಲಾವಣಿ ಗೀಗೀ ಹಾಡು
ಯಾತಕವ್ವಾ ಹುಬ್ಬಳ್ಳಿ ಧಾರ್ವಾಡs!
ಹೀಗೆ ಜನಪದರಿಂದ ಪಡೆದುಕೊಂಡು ಬಂದ ಲಾವಣಿ, ಗೀಗಿ ಹಾಡುಗಳ ಸವಿ ಇರಲು ಆಧುನಿಕ ಕಾವ್ಯದ ಬಿಗುತನ ಏಕೆ ಎಂಬ ಸಹಜ, ಸರಳ ಮತ್ತು ಕಲ್ಮಶವಿಲ್ಲದ ಭಾವನೆಗಳ ಸಮೃದ್ಧತೆದೆಡೆಗೆ ಕವಿಯ ಕಾವ್ಯ ಹರಿದಿದೆ. ‘ನಮ್ಮ ಹಳ್ಳಿಯೂರs ನಮಗ ಪಾಡs ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ’ ಎಂಬ ಆನಂದಕಂದ ಜನಪ್ರಿಯ ಈ ಗೀತೆ ಅವರ ಒಟ್ಟು ಕಾವ್ಯ ಧೋರಣೆಯನ್ನು ಪ್ರಕಟಿಸುತ್ತದೆ.
ಊರ ಮುಂದ ತಿಳಿನೀರಿನ ಹಳ್ಳ
ಬೇವು ಮಾವು ಹುಲಗಲ ಮರಚೆಳ್ಳ
ದಂಡಿಗುಂಟ ನೋಡು ನೆಳ್ಳs ನೆಳ್ಳs
             ನೀರ ತರುವಾಗ ಗೆಣತ್ಯಾರ ಜೋಡs
             ಯಾತಕವ್ವಾ ಹುಬ್ಬಳ್ಳಿ - ಧಾರ್ವಾಡs
ಆಧುನಿಕತೆಯ ಸೋಗಿನಲ್ಲಿ ವಾಸ್ತವದ ಬದುಕು ಅನುಭವಿಸುವ  ವಂಚಿತ ಸಮುದಾಯದ ನೋವು ನಿರಾಸೆಗಳನ್ನು ಈ ಮೂಲಕ ಅಬಿsವ್ಯಕ್ತಪಡಿಸುವ ಕವಿ ಗ್ರಾಮ  ಸಂಸ್ಕøತಿಯ ತಾಜಾತನ, ಅದರ ಸಹಜತೆಗೆ ಮಾರುಹೋಗಿ ಅದರಲ್ಲಿ ಬದುಕಿನ ಅಂತಿಮ ಸಾರ್ಥಕತೆಯನ್ನು ಪ್ರಕಟಿಸಿದ್ದಾರೆ. ಬೇಂದ್ರೆ, ಕುವೆಂಪು ಅವರಂತೆ ಭಾಷೆಯನ್ನು ಹೇಗೆ ಬೇಕೊ ಹಾಗೆ ಹಿಂಜುವುದಕ್ಕೆ, ಹಿಂಡುವುದಕ್ಕೆ ಬೆಟಗೇರಿಯವರು ಹೋಗಿಲ್ಲ. ಭಾವವನ್ನು ಸ್ಪಷ್ಟಪಡಿಸುವ ಶಕ್ತಿಯನ್ನು ಬೆಟಗೇರಿಯವರ ಭಾಷೆ ಜಾನಪದದಿಂದ ಪಡೆದಿದೆ. ಸಂಭಾಷಣೆಯ ರೀತಿಯೂ ಜನಪದರ ಮಾತಿನ ಯಥಾವತ್ತ ರೂಪವಾಗಿದೆ. ಚೆಲುವೆ ಹೆಣ್ಣನ್ನು ಒಲಿದು ತಂದ ಅಣ್ಣನಿಗೆ ತಂಗಿ ಕೇಳುವ  ಮಾತು ಗಮನಿಸಿ,
         “ಹೇಳು ಹ್ಯಾಂಗಿವಳು ನಿನ್ನ ಮೆಚ್ಚಿದಳು
ಮಾಟ ಮಾಡಿದೇನೋ”
        ‘ಎಲ್ಲಿಂದೀಕೀನ ಕರೆತಂದೆಣ್ಣಾ ಯಾರು ಹೇಳು ಈಕಿ’ ಎಂಬ ಮಾತಿನಲ್ಲಿ ಸಹಜತೆ ಇದೆ. ಜನಪದರ ಆಡುನುಡಿಯಲ್ಲಿ ಬಳಕೆಯಾಗುವ ಪಡೆನುಡಿ, ಗಾದೆ, ನಾಣ್ನುಡಿಗಳ ರೂಪಗಳು ಆನಂದಕಂದರ ಕಾವ್ಯದಲ್ಲಿಯೂ ಬೇಂದ್ರೆಯವರ ಕಾವ್ಯದಂತೆ ತುಂಬಿಕೊಂಡಿವೆ.
ಉಟ್ಟಾಳು ಹಸಿರು ಪತ್ತಲಾ
ಪತ್ತಲಲ್ಲ ಹೂವಿನ್ಹಿತ್ತಲಾ
( ನಾಜೂಕದ ನಾರಿ)
‘ಕೊರದ್ಹಾಂಗ ಕರಿಯ ಕುಡಿಹುಬ್ಬಾ’
(ನಾಜೂಕದ ನಾರಿ)
‘ಮುಂಗುರುಳು ಹಾರ್ಯಾಡುವ ಹಣಿ
ಚೆಲ್ವಿಕೆಯ ಖಣೀ’
(ಬೆಣ್ಣಿಯಾಕಿ)
‘ಕಲ್ಲಿನೊಳಗ ಮಲ್ಲಿಗಿ ಅರಳೀತ? ಹೇಳು ಎಲ್ಲಿ ಯಾಕಿ’
(ಯಾರು ಹೇಳು ಈಕಿ?)
‘ಹುಣ್ಣಿವಿ ಗೌರಿಯ ಚಲುವಿಗೆ ಈಕಿಯ ಎದುರು ಸೋಲೆ ಸೋಲ’
(ಯಾರು ಹೇಳು ಈಕಿ?)
‘ಚಂದೂ ಮಾಮನ ಮಗಳಿವಳೇನೋ ಹಾಂಗ ನಗಿಯ ರೀತಿ’
(ಯಾರು ಹೇಳು ಈಕಿ)
 ‘ಅನ್ನ ಕುಮಾರನ ಬಸುರಿಯದಾಳೌ ನಮ್ಮ ಭೂಮಿದೇವಿ
ಬಯಕಿಯ ಊಟಾ ಉಣಿಸಬೇಕs ಬಂದೈತಿ ಸೀಗಿ ಹುಣ್ಣಿವಿ!’
(ಸೀಗಿ ಹುಣ್ಣಿವಿ)
‘ತಿಳಿಯಿದ್ದ ಒರತಿಯs ನೀರು ಕಲಿಕ್ಯಾವs’
(ನಲ್-ವಾಡುಗಳು)
ಹೀಗೆ ಅನೇಕ ರೂಪಗಳು ಮಾತಿನ ಮೋಡಿಯಿಂದ ಜಾನಪದರ ಶಕ್ತಿ ಸೌಂದರ್ಯ, ಮಾತಿನ ಶೈಲಿ ಸಿದ್ದಿ  ಬೆಟಗೇರಿಯವರ ಕಾವ್ಯದಲ್ಲಿ ಸಮೃದ್ಧಗೊಂಡಿವೆ.
‘ನಾ ಸಂತಿಗೆ ಹೋಗಿನ್ನಿ - ಆಕಿ ತಂದಿದ್ದಾಳೋ ಬೆಣ್ಣಿ;
ಹಿಂಡು ಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ
(ಬೆಣ್ಣಿಯಾಕಿ)
ಬಿಳಿ ಬಿಳಿ ಬಿಳಿ ದೋತರೇನ-
ಹೊಳಿ ಹೊಳಿಯುವ ಅಂಗಿಯೇನ,
ಜರದಂಚಿನ ಪಟಕಾ ಸುತ್ತಿ
(‘ಚಿನ್ನತ್ತಿಯ ಮಗ’ )
ತೊಂಡಿದುಟಿಯ ಮ್ಯಾಲ್ ಮಲಗಿದ್ದರು ನಗಿ ಕಾಣಲಿಲ್ಲೊ ಹಲ್ಲಾ
ಕಿರಿಗುಣಿ ಕೂಡಿಯಿತ್ತೊ ಗಲ್ಲಾ
(ಬಡವರ ಮಗಳು)
‘ಹೆಜ್ಜೆ ಹೆಜ್ಜೆಗೂ ಘಿಲಿಘಿಲಿ, ಘಿಲಿಘಿಲಿ ಗೆಜ್ಜಿಯ ಕುಣಿಸುತ ಬರುವಾಕಿ’
(ಗೌಡರ ಮನಿಸೊಸಿ),
ಹೆಂಗಸು ಜಲಮಾ ಕೊಟ್ಟನ್ಯಾಕ ಶಿವ ಅಂತ ಮನಸಿನೊಳಗ -
ಹಾಂಗs ಉರಿಯತೈತಿ ಕೊರಗ
(ಗೆಣತೀ ಏನ ಮಾಡ ಅಂತೀ ಪು. 39),
ಬುತ್ತೀ ತೊಗೊಂಡು ಹೋಗ್ತಿನಿ ಹೊಲಕ
ನಾ ಬರ್ತೀನಿ ಹೊತ್ತು ಮುಣುಗುದಕ
ಹೊಳಿ ದಂಡೀ ಮ್ಯಾಗ ನಮ್ಮ ಹೊಲಾ
ಬೆಳೆದು ನಿಂತೈತಿ ಬಿಳಿ ಜೋಳ ನಿಲಾ
(ಬೆಳವಲ ಒಕ್ಕಲತಿ)
ದೇವರದೆಂತಾ ಹೊಡ್ಡಸ್ತಿಕೆ ಬಿಡು ನನ್ನ ದೊರಿಯ ಮೇಲs
ನನ್ನ ಹೊರತು ಇನ್ನೊಂದು ಹೆಣ್ಣ ಮ್ಯಾಲಿಲ್ಲ ಅವಗ ಖ್ಯಾಲ
(ದೇವರ ದೇವರು)
ನಮ್ಮೂರ ಜಾತ್ರಿ ಬಲು ಜೋರಾ,
ಕರಿಯಾಕs ಬಂದಾರs ತವರವರಾ
(ನಮ್ಮೂರ ಜಾತ್ರಿ)
ಹೈನದೆಮ್ಮಿ ನೋಡ ಹಾಲ ಸಮುದರಾ
ಎಷ್ಟು ತಿನ್ನಾಕಿ ನೀ ಕೆನಿಕೆನಿ ಮಸರಾ
(ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ)
ಹೀಗೆ ಜನಪದ ಜೀವನದ ವೈವಿಧ್ಯಮಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಆನಂದಕಂದರು ‘ನಲ್ವಾಡುಗಳು’ ಸಂಕಲನದ ಕವಿತೆಗಳಲ್ಲಿ ಕಂಡರಿಸಿದ್ದಾರೆ. ಇಲ್ಲಿ ಉತ್ತರ ಕರ್ನಾಟಕದ ಬೆಳಗಾವಿ-ಧಾರವಾಡ-ವಿಜಾಪುರ ಭಾಗದ ಕನ್ನಡ ಭಾಷಾ ಪ್ರಭೇಧವನ್ನು ತಮ್ಮ ಕವಿತೆಗಳಲ್ಲಿ ಬಳಸಿಕೊಂಡಿದ್ದಾರೆ. ಸತ್ವಪೂರ್ಣ ಜಾನಪದೀಯ ಭಾಷೆ ಇಲ್ಲಿದೆ. ಒಟ್ಟಿನಲ್ಲಿ ‘ಆನಂದಕಂದ’ರ ಕವಿತೆಗಳು ಕನ್ನಡ ನವೋದಯ ಕಾವ್ಯ ಸಂದರ್ಭದಲ್ಲಿ ಜಾನಪದವನ್ನು ಅದರ ಮೂಲತನದಿಂದಲೇ ಎತ್ತಿಕೊಂಡಷ್ಟು ಪ್ರಭಾವಕ್ಕೆ ಒಳಗಾಗಿವೆ. ಜನಪದ ಭಾಷೆ, ಛಂಧಸ್ಸು, ನುಡಿಗಟ್ಟು ಮತ್ತು ಜನಪದರ ವಿವಿಧ ಲಯಗಳೆಲ್ಲವನ್ನು ಹಾಗೂ ಅವರ ಬದುಕಿನ ಕ್ರಮವನ್ನು ಅವರ ಕವಿತೆಗಳು ಯಶಸ್ವಿಯಾಗಿ ತನ್ನದಾಗಿಸಿಕೊಂಡಿವೆ. ಬೇಂದ್ರೆ, ಮಧುರಚೆನ್ನರಂತೆ ಜಾನಪದದ ಮಹತ್ವಪೂರ್ಣ ಸಾಧಕರಾಗಿ ಬೆಟಗೇರಿ ಕೃಷ್ಣಶರ್ಮರು ನವೋದಯ ಕಾವ್ಯದ ಸಂದರ್ಭದಲ್ಲಿ ಎದ್ದು ಕಾಣುತ್ತಾರೆ.
-----------------------------------------------------------------------------------------------------
.
ವಿಳಾಸ :
 ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,
 ನವನಗರ,ಬಾಗಲಕೋಟ-587103. ಮೊ.-9845500890

Saturday 13 July 2013

ಜನಮುಖಿ ಚಳವಳಿ


ಹೊಸದಿಗಂತ 21.3.2013 ವಿಶೇಷ ಪುಟದಲ್ಲಿ  ಪ್ರಕಟವಾದ ಲೇಖನ  :



ಭಾರತೀಯ ಗ್ರಾಮ ಸಮುದಾಯ ಮತ್ತು  ಜನಮುಖಿ ಚಳವಳಿ                   


               - ಡಾ.ಪ್ರಕಾಶ ಗ. ಖಾಡೆ, ಬಾಗಲಕೋಟ

                

            ಭಾರತೀಯ ಸಂವೇದನೆಯಲ್ಲಿ ಇಂಗ್ಲಿಷ್ ಶಿಕ್ಷಣ ಕ್ರಮ ಮತ್ತು ವಸಾಹತುಶಾಹಿ ಕಾರಣವಾಗಿ ಉಂಟಾದ ಸಂಘರ್ಷ ನೆಲೆ ಕನ್ನಡ ಭಾಷಿಕ, ಸಾಂಸ್ಕøತಿಕ ಪರಿಸರದ ಮೇಲೂ ದಟ್ಟ ಪ್ರಭಾವ ಮೂಡಿಸಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾದ ಸಾಂಸ್ಕøತಿಕ ಪುನರುಜ್ಜೀವನವು ಒಂದು ಬಗೆಯಲ್ಲಿ ವಸಾಹತುಶಾಹಿಯ ಕೊಡುಗೆ ಎನಿಸಿದರೂ ಅದರ ವಿರುದ್ಧ ದೇಸಿಯ ಒಳ ಬಂಡಾಯ ತೀವ್ರವಾಗಿ  ನಡೆದುಕೊಂಡೆ ಬಂದಿತ್ತು. ದೇಸಿವಾದದ ಹಿಂದೆ ಸಂಸ್ಕøತಿ ಬಗೆಗಿನ ಚಲನಶೀಲವಾದ ಪರಿಕಲ್ಪನೆಯಿದೆ. ಬದುಕಿನ ಸತ್ವಶೀಲಗಳನ್ನು ಕಬಳಿಸುವ ಒಳಗಣ ಮತ್ತು ಹೊರಗಣ ಎಲ್ಲ ಚಲನೆಗಳ ವಿರುದ್ಧ ದೇಸಿವಾದವು ಬಂಡು ಹೂಡುತ್ತದೆ, ಹೀಗಾಗಿ ಇಲ್ಲಿ ವಸಾಹತುಶಾಹಿಯ ಭದ್ರ ಬಾಹುಗಳು ಒಟ್ಟು ಸ್ಥಳೀಯತೆಯನ್ನು ಚಾಚಿ ತಬ್ಬಿಕೊಳ್ಳಲು ಮಾಡಿದ ಹೇಳಿಕೆಗಳು ಭಾರತೀಯ ಗ್ರಾಮ ಸಮುದಾಯಕ್ಕೆ ಕೆಲವು ಬಾರಿ ತಟ್ಟದೇ ದೂರವೇ ಉಳಿಯುವಂತಾಯಿತು. ಈ ಚರ್ಚೆಗೆ ಪೂರಕವಾಗಿ ವಸಾಹತುಶಾಹಿ ಸಂಘರ್ಷವು ಒಟ್ಟು ಭಾರತೀಯ ಆ ಮೂಲಕ ಕನ್ನಡತನವನ್ನು ಆಕ್ರಮಿಸಿಕೊಂಡಿತೆಂದು ಹೇಳುವುದು ಅರ್ಧಸತ್ಯವಾಗುತ್ತದೆ. ಬ್ರಿಟಿಷ್ ಮಿಶನರಿಗಳು ಭಾರತದ ನಾಗರಿಕತೆಯನ್ನು ನಾಶ ಮಾಡಲು ಪ್ರಯತ್ನಿಸಿದರು. ಆದರೆ ಎರಡು ಕಾರಣಗಳಿಂದಾಗಿ ಅವರು ಇದರಲ್ಲಿ ಸಫಲರಾಗಲು ಸಾಧ್ಯವಾಗಲಿಲ್ಲ. ಒಂದು ಭಾರತೀಯ ಸಂಸ್ಕøತಿ ಮತ್ತು ನಾಗರಿಕತೆಗಳ ಶಿಲ್ಪಿಗಳು ಹಾಗೂ ರಕ್ಷಕರು ಮಹಿಳೆಯರು, ಇನ್ನೊಂದು ಭಾರತದ ಜನಸಂಖ್ಯೆಯ ಪ್ರತಿಶತ ಎಪ್ಪತ್ತೈದರಷ್ಟು ಮಂದಿ ಹಳ್ಳಿಗಳಲ್ಲಿ ವಾಸ ಮಾಡುವವರು. ಹಾಗಾಗಿ ಬ್ರಿಟಿಷ್ ಆಡಳಿತಗಾರರ ಹಾಗೂ ಮಿಶನರಿಗಳ ಪ್ರಭಾವ ಅವರನ್ನು ಮುಟ್ಟಲೇ ಇಲ್ಲ.

            ಹಾಗಾಗಿ ಈ ವಸಾಹತುಶಾಹಿಯ ಬಾಹುಗಳು ನಮ್ಮ ಗ್ರಾಮ ಜೀವನವನ್ನು ವ್ಯಾಪಕವಾಗಿ ಆಕ್ರಮಿಸಿಕೊಳ್ಳದೆ ಇರುವ ಕಾರಣವು ಇಲ್ಲಿ ಜನಪದರ ಹಾಡು ಸಂದರ್ಭಗಳಿಗೆ ಧಕ್ಕೆ ಬಾರದೇ ಅವು ರೂಡಿsಗತವಾಗುತ್ತ ಉಳಿದುಕೊಂಡು ಬಂದವು. ಎಲ್ಲೆಲ್ಲಿ ಈ ಪ್ರಭಾವವು ದಟ್ಟವಾಯಿತೋ ಅಲ್ಲೆಲ್ಲ ಪ್ರತಿರೋಧವಾಗಿ ವಸಾಹತುಶಾಹಿಯ ಧೋರಣೆಯನ್ನು ಖಂಡಿಸಲಾಯಿತು. ಆದರೆ ವಸಾಹತುಶಾಹಿ ಮನಸ್ಸುಗಳಿಂದ ರೂಪಿತವಾದ ನಮ್ಮ ನಗರ ಸಮುದಾಯವು ಗ್ರಾಮ ಬದುಕಿನ ಒಳ ಆವರಣವನ್ನು ಕಲುಷಿತಗೊಳಿಸುವ ಸಂದರ್ಭಗಳೂ ಬಂದಾಗಲೂ ಇಲ್ಲಿ ತಲ್ಲಣ, ತಳಮಳ ಆರಂಭವಾಯಿತು. ನಗರ ಬದುಕಿನ ಆಕರ್ಷಣೆಗಳು, ಆಧುನಿಕರಣದ ಸೋಂಕಿಲ್ಲದ ಗ್ರಾಮ ಬದುಕನ್ನು ¿sದ್ರಗೊಳಿಸುವ ಸಂಚೂ ಸದ್ದಿಲ್ಲದೆ ನಡೆಯಿತು.

            ಈ ಬಗೆಯಲ್ಲಿ ಯಾವುದನ್ನು ಭಾರತೀಯವಾಗಿಟ್ಟುಕೊಳ್ಳಬೇಕೆಂಬ ದ್ವಂದ್ವ ಆರಂಭವಾಯಿತು. ಗಾಂದಿs ಹೇಳಿದರು ‘ತನ್ನಷ್ಟೇ ಪುರಾತನವಾದ ಗ್ರಾಮ ಭಾರತ ಅಥವಾ ವಿದೇಶೀ ಪ್ರಭುತ್ವದ ದಾಸ್ಯದಡಿಯಲ್ಲಿ ಸೃಷ್ಟಿಯಾಗಿ ಬೆಳೆದು ಬಂದ ನಗರ ಜೀವನದ ಭಾರತ ಇವೆರಡರಲ್ಲಿ ಒಂದನ್ನು ನಾವು ಆರಿಸಿಕೊಳ್ಳಬೇಕಾಗಿದೆ. ಹಳ್ಳಿಗಳ ಮೇಲೆ ಆಕ್ರಮಣ ಮಾಡಿ ಅಲ್ಲಿನ ಸಂಪತ್ತನ್ನೆಲ್ಲ ಹೀರುತ್ತಿರುವ ಇಂದಿನ ನಗರಗಳು ಹಳ್ಳಿಗಳನ್ನು ಹಾಳುಗೆಡವುತ್ತಿವೆ. ಈ ದಬ್ಬಾಳಿಕೆ ನಿಂತು ನಗರಗಳು ಗ್ರಾಮ ಜೀವನದ ಪೆÇೀಷಕವಾದ ಸೇವೆಸಲ್ಲಿಸುವಂತಿರಬೇಕೆಂದು ನನ್ನ ಖಾದಿ ಮನೋಭಾವ ನನಗೆ ಬೋದಿsಸುತ್ತದೆ. ಹಳ್ಳಿಗಳ ಶೋಷಣೆ ಒಂದು ವ್ಯವಸ್ಥಿತ ಹಿಂಸಾಚಾರ. ನಾವು ಸ್ವರಾಜವನ್ನು ಅಹಿಂಸೆಯ ತಳಹದಿಯ ಮೇಲೆ ನಿರ್ಮಿಸುವುದಾದರೆ ಗ್ರಾಮಗಳಿಗೆ ಯೋಗ್ಯ ಸ್ಥಾನವನ್ನು ಕೊಡಲೇಬೇಕು.’(ಹರಿಜನ ಪತ್ರಿಕೆ-20.01.1940) ಹೀಗೆ ಗ್ರಾಮ ಸಮುದಾಯದ ಮನೋಧರ್ಮ ಮತ್ತು ಮನಸ್ಥಿತಿಗಳು ಕೋಮಲ ಹಾಗೂ ಹೃದಯಪೂರ್ಣವಾದುದ್ದರ ಕಾರಣವಾಗಿ ಅಹಿಂಸೆಯ ಆಚರಣೆಗೆ ಅದೇ ಶಕ್ತಿ ಮತ್ತು ಬಲ ತುಂಬಬಲ್ಲದೆಂದು ಅರಿತಿದ್ದ ಗಾಂದಿsೀಜಿಯವರು ಗ್ರಾಮ ಸಮುದಾಯದ ಆಶಯಗಳಿಗೆ ಮಹತ್ವ ನೀಡಿದ್ದರು.

     ಗಾಂದಿsೀಯವರಿಗೆ ಸ್ಥಳೀಯತೆಯು ಎಲ್ಲಾ ಯೋಚನೆ-ಯೋಜನೆಗಳ ಮೂಲ ಮಂತ್ರವಾಗಿತ್ತು. ಆ ಹೊತ್ತಿಗೆ ವಸಾಹತು ಮನೋಭೂಮಿಕೆ ಉಂಟುಮಾಡಿದ ನಗರ-ಗ್ರಾಮ್ಯಗಳ ತಾಕಲಾಟದ ಒಳ ಸಂಘರ್ಷಣೆಗೆ ಅವರು ಪ್ರತಿಕ್ರಿಯಾತ್ಮವಾಗಿ ಅನೇಕ ಚಿಂತನ, ಭಾಷಣಗಳನ್ನು ಮುಂದಿಡುತ್ತಾ ಬಂದರು. ಗಾಂದಿsಯವರ ಈ ಚಿಂತನೆಗಳನ್ನು ಅಕ್ಷರ ಬಾರದ, ಸಂಪರ್ಕ ರಹಿತ ಗ್ರಾಮ ಸಮುದಾಯಕ್ಕೆ ತಲುಪಿಸುವಲ್ಲಿ ನಮ್ಮ ಜನಪದ ಮೌಖಿಕ ಕಾವ್ಯ ತುದಿಗಾಲ ಮೇಲೆ ನಿಂತು ಕೆಲಸ ಮಾಡಿ ಪ್ರಧಾನ ಬಿsತ್ತಿಗೆ ತನ್ನನ್ನು ಸಮರ್ಪಿಸಿಕೊಂಡಿತು. ಈ ಕಾರ್ಯ ವ್ಯಾಪಕವಾಗಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಹಬ್ಬಿತು. ಲಾವಣಿಕಾರರು ತಮ್ಮ ಹಾಡುಗಳಿಗೆ ಸಾಂದಬಿರ್sಕತೆಯನ್ನು ಬಳಸಿಕೊಂಡು ರಾಷ್ಟ್ರೀಯ ಚಳವಳಿಗೆ ಗ್ರಾಮ ಸಮುದಾಯವನ್ನು ಸಜ್ಜುಗೊಳಿಸಿದರು.

     ಗಾಂದಿsೀಜಿಯವರ ಸಂದೇಶ ಮತ್ತು ಆಶಯಗಳಿಗೆ ದತ್ತವಾದ ರಾಷ್ಟ್ರೀಯ ಆಂದೋಲನ ಪ್ರಚಾರಕ್ಕಾಗಿ ಗೀತ-ಮೇಳಗಳನ್ನು ಕಟ್ಟಿ ತಮ್ಮ ಹಾಡುಗಳ ಮೂಲಕ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಕೀರ್ತಿ ಲಾವಣಿಕಾರರಿಗೆ ಸಲ್ಲುತ್ತದೆ. ದೇಸೀಯ ಚಿಂತನೆಗಳಿಗೆ ಗಾಂದಿsೀಜಿ ಒತ್ತು ಕೊಡುವುದರ ಮೂಲಕ ಗ್ರಾಮ ಸಂಸ್ಕøತಿಯನ್ನು ಎತ್ತಿ ಹಿಡಿದರು. ಗ್ರಾಮ ಸಂಸ್ಕøತಿಯ e್ಞÁನ ಕ್ಷೇತ್ರಗಳು ಮೌಖಿಕ ಆಶಯಗಳಾಗಿದ್ದವು. ಉದ್ದಕ್ಕೂ ಮೌಖಿಕ ಮತ್ತು ಲಿಖಿತ ನೆಲೆಗಳ ಬಗೆಗೆ ಸಂಘರ್ಷಗಳು ಕಂಡು ಬಂದವು. ಜಾನಪದವು ಮೌಖಿಕ ಕಾವ್ಯದ ಒಂದು ಸಮೃದ್ಧ ಸೃಷ್ಟಿ. ಆದರೆ ಲಿಖಿತವಾಗಿ ಅದು ಒಂದು ಕಟ್ಟಳೆಗೆ ಒಳಗಾದಾಗ ಅದರ ಹೊಸತನವೆಂಬುದು ಎಷ್ಟು ಪ್ರಸ್ತುತ ಎಂಬ ಕುರಿತು ಜಿe್ಞÁಸೆಗಳು ಆರಂಭವಾದವು. ಲಿಖಿತವೆನ್ನುವುದು ಜಾನಪದವನ್ನು ಒಂದು ಬಗೆಯಲ್ಲಿ ಕಟ್ಟಳೆಗೆ ಒಳಪಡಿಸುತ್ತದೆ. ಜನಪದ ಕಾವ್ಯಗಳು ಉದ್ದಕ್ಕೂ ಮೌಖಿಕ ಸಂವಹನದಿಂದಲೇ ಉಳಿದುಕೊಂಡು ಬಂದು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತ ಕಾಲಕಾಲಕ್ಕೆ ತನ್ನ ಹೊಸತನದ ಇರುವನ್ನೇ ಪ್ರಕಟಪಡಿಸುತ್ತ ಬಂದವು. ಹೀಗೆ ಮೌಖಿಕ ಕಾವ್ಯ ಸಂವಹನದಿಂದ ಪ್ರಭಾವಿತರಾಗಿ ಲಿಖಿತವೆನ್ನುವುದು ಬಂದಾಗ ನಮ್ಮವರು ಬರೆದದ್ದು ಅವರ ಸೃಜನಶೀಲತೆಯೊಂದಿಗೆ ಜನಪದ ಮೌಖಿಕ ಸಂವಹನದ ಎಳೆಗಳೂ ಸೇರಿ ‘ಜಾನಪದವೇ’ ಎನ್ನುವಷ್ಟು ಗಾಢತೆ ಮೆರೆದವು.ಕಿ.ರಂ.ನಾಗರಾಜ ಅವರ ಪ್ರಕಾರ ‘ಬಹುತೇಕ ಕನ್ನಡದ ಮಹತ್ವದ ಸಾಹಿತ್ಯ ಕೃತಿಗಳು ಅನಕ್ಷರಸ್ಥ ಸಂಸ್ಕøತಿಯ ಬಗೆಗೆ ಗಾಢವಾದ ತಿಳುವಳಿಕೆಯಿಂದ ಕೂಡಿದ್ದಾಗಿದೆ. ಇಂದಿಗೂ ನಿಜವಾದ ಅರ್ಥದಲ್ಲಿ ಅನಕ್ಷರಸ್ಥರೇ ಕನ್ನಡ ಕವಿತೆಯ ನಿಜವಾದ ಗ್ರಾಹಕರು.’

       ಮೌಖಿಕ ಕಾವ್ಯ ಸಂವಹನವು ಹೆಚ್ಚು ಕೇಳುಗರನ್ನು ಪಡೆದುಕೊಳ್ಳುತ್ತದೆ ಮತ್ತು ಅರ್ಥವಾಗಲು ಯಾರ ನೆರವನ್ನೂ ಬಯಸುವುದಿಲ್ಲ. ಕೆಲವು ಕಟ್ಟಳೆಗಳು ತನ್ನಷ್ಟಕ್ಕೆ ತಾವೇ ರೂಪುಗೊಳ್ಳುತ್ತವೆ. ಹೀಗಾಗಿ ಈ ಕಟ್ಟಳೆಗಳಿಂದ ಜಾನಪದವು ಅಳಿದು ಹೋಗುತ್ತದೆ ಎಂಬ ಆತಂಕವಿದೆ. ಇದಕ್ಕೆ ಮೊಗಳ್ಳಿ ಗಣೇಶ್ ಹೀಗೆ ಹೇಳುತ್ತಾರೆ: “ಜಾನಪದ ಪಠ್ಯ ಹಾಳಾಗಿ ಹೋಗುತ್ತದೆ ಎಂಬ ಆತಂಕ ಬೇಕಾಗಿರುವುದಿಲ್ಲ. ಜಾನಪದ ಸ್ವಭಾವವೇ ಅತ್ಯಂತ ಚಲನಶೀಲತೆಯನ್ನು ಬಯಸುವಂಥದ್ದು, ಆದರೆ ಇಲ್ಲಿ ಪಠ್ಯದ ರೂಪ ರಚನೆಯಲ್ಲಿ ಮಹತ್ವದ ಬದಲಾವಣೆಗಳು ದಿsಡೀರನೆ ಉಂಟಾಗದಿದ್ದರೂ ತನ್ನ ರಚನೆಗೆ ಶೈಲಿಗೆ ಹೊಸತನ್ನ ಸ್ವೀಕರಿಸುವ ಗುಣ ಪಠ್ಯಕ್ಕೆ ಇರುತ್ತದೆ. ಅಂದರೆ ಕಾಲದ ಮೌಲ್ಯಗಳು ಸೂಕ್ಷ್ಮವಾಗಿ ಪಠ್ಯದ ಭಾಗಗಳಾಗಿ ಬಿಡುತ್ತವೆ.” ಮೌಖಿಕ ಲಿಖಿತ ಎನ್ನುವಲ್ಲಿ ಕಾವ್ಯ ಸಂವಹನಗೊಳ್ಳುವ ತೀವ್ರತೆಯಲ್ಲಿ ಅದರ ಅರ್ಥವಂತಿಕೆ ಬಿಚ್ಚಿಕೊಳ್ಳುತ್ತದೆ.

ಅಝಾದ್ ಹಿಂದ್ ಗೀಗೀ ಮೇಳ        

   ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿsಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು. ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜಾನೇವಾರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂದಿsೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ (ಹುಲಕುಂದ ಬಿsೀಮಕವಿ) ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು.

       

           ಭಾರತೀಯ ಗ್ರಾಮೀಣ ಮನಸ್ಸುಗಳನ್ನು ಆಧುನಿಕತೆ ಆಕ್ರಮಿಸಿಕೊಂಡುದರ ಸಂಕೇತವಾಗಿ ಬದಲಾದ, ಬದಲಾಗುತ್ತಿರುವ ವಸ್ತು ಸಂಗತಿಗಳನ್ನು ಕಾವ್ಯದಲ್ಲಿ ಕಟ್ಟಿಕೊಡುವುದರ ಮೂಲಕ ಲಾವಣಿಕಾರರು ಸಮಕಾಲೀನತೆಗೆ ಸ್ಪಂದಿಸಿದ್ದು ಸ್ಪಷ್ಟವಾಗುತ್ತದೆ. ನಾಡಿನ ಪ್ರೀತಿಯನ್ನು ಅವರ ಕಾವ್ಯಶಕ್ತಿ ಜನಸಾಮಾನ್ಯರಲ್ಲಿ ಮಿಂಚು ಮೂಡಿಸಿತು. ಅಕ್ಷರಬಾರದ ಅನೇಕ ಜನಪದ ಸಮುದಾಯದ ಹಾಡುಗಾರಿಕೆಯಿಂದಾಗಿ ಅಂದು ಗಾಂಧೀಜಿಯವರ ಸಂದೇಶವನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಿದ ಕೀರ್ತಿ ನಮ್ಮ ಜನಪದರಿಗೆ ಸಲ್ಲುತ್ತದೆ.ಈ ಮೂಲಕ ಗಾಂಧೀಜಿ ಸ್ಥಳೀಯತೆಯ ಸದ್ಭಳಕೆಗೆ ಚಾಲನೆ ನೀಡಿದರು.

                                     -ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ

            ವಿಳಾಸ : ಡಾ.ಪ್ರಕಾಶ ಗ.ಖಾಡೆ,’ಶ್ರೀ ಗುರು’,ಸರಸ್ವತಿ ಬಡಾವಣೆ,ಸಂಖ್ಯೆ 63,

                  ನವನಗರ,ಬಾಗಲಕೋಟ.ಮೊ.9845500890


ಕವಿತೆ :ಅದಕಂದರ ಬದುಕ -ಡಾ.ಪ್ರಕಾಶ ಖಾಡೆ

                                   ಅದಕಂದರ ಬದುಕ

 

ಮೊಗ್ಗಿನ ಮೊದಲ ಸಣ್ಣ ಬೀಜದ ನೆವಕ
ಒಡಮೂಡಿತೊಂದ ಅಸ್ತಿತ್ವದ ಇರುವ
ಅದ ಬೆಳೆಬೆಳೆದು ದಿನಾ ಆಟೀಟ ಅನುತ
ಹೂವಾಗಿ ಬಂತ ಜಗಕ; ಅದಕಂದರ ಬದುಕ

ಹೊಸಾ ಚೆಲುವಿಕಿ ಕಂಡವರ ಒಲವಿಕಿ
ಸೇರಿ ಬೆಳೆಸಿತ ಸಂಬಂಧ
ಇರುತನಾ ಎಂಥ ಆನಂದ
ಹೂವಾಗಿ ಅರಳಿದ ವ್ಯಾಳೇಕ ಏಸೋಂದು ದುಂಬಿ ಸಾಲ

ಉಂಡವರು ಕೊಟ್ಟಿದ್ದು ಬಿಟ್ಟಿದ್ದು ಏನಿರಲಿ
ಹಂಚಿದ್ದು ಮಾತ್ರ ಜೇನು ಹಾಲಾ
ಉಳಿದೀತ ಏನ ದಿನದಿನಕ ಕೂಡಿಡಲು
ಹೆಸರ ಹೇಳಲಿಕ್ಕ ಯಾರಿಲ್ಲ ಒಂದ ಖೂನಾ

ಬಿದ್ದ ಬೀಜದ ಮೊಳಕಿ
ಮತ್ತು ಹೊಸಾ ಹಾದಿ ಹುಡುಕಿ
ಗಾಳಿದಾಳಿಗಿ ಹಾರಿ ಹಾರ್ಯಾಡಿ
ಉಳಿದ್ಹಾಂಗ ಆತ ಸುಮ್ಮಕ
ಯಾಕ ಬೇಕ ನೂಕ

ನೊಂದವರ ಹಾಡಿರಲಿ ಬೆಳಕ ಹರಿವತನಕ


- ಡಾ. ಪ್ರಕಾಶ ಗ. ಖಾಡೆ ,ಬಾಗಲಕೋಟ
   ಮೊ.9845500890



Wednesday 10 July 2013


                  ಬಾಗಲಕೋಟೆ : ನವನವೀನ ನಗರ

                                       - ಡಾ.ಪ್ರಕಾಶ ಗ.ಖಾಡೆ
    ಬಾಗಲಕೋಟೆ ಊರು ಮುಳುಗಡೆ ಮತ್ತು ಸ್ಥಳಾಂತರದ ಕಾರಣವಾಗಿ ಇಡೀ ಏಶಿಯಾ ಖಂಡದಲ್ಲಿಯೇ ಬಹು ದೊಡ್ಡ ನಗರವೊಂದು ತಲ್ಲಣಕ್ಕೊಳಗಾಗಿ ಈಗ ಸುಂದರವಾಗಿ ರೂಪಿತವಾಗುತ್ತಿರುವುದು ಒಂದು ದಾಖಲೆಯೆ ಸರಿ. ಘಟಪ್ರಭಾ ನದಿಯ ದಡದಲ್ಲಿರುವ ಈ ನಗರವು ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಿಂದ ಕೃಷ್ಣೆವು ಸೇರಿಕೊಂಡು ಕೋಟೆಯ ಬಾಗಿಲಿಗೆ ಹಿರಿ ಹೊಳೆಯ ಬಾಗಿನ ಅರ್ಪಿಸಿದಂತಾಗಿದೆ.ಬಾಗಲಕೋಟೆಯು  ರಾಮಾಯಣ ಕಾಲದಿಂದಲೂ ಚಾಲ್ತಿಯಲ್ಲಿದ್ದ ಊರು.ಲಂಕಾಧಿಪತಿ ರಾವಣಾಸುರನು ಭಜಂತ್ರಿ ವಾದ್ಯಗಾರರಿಗೆ ದಾನವಾಗಿ ನೀಡಿದ ಊರು.ಅಂತೆಯೇ ಇಲ್ಲಿನ ಭಜಂತ್ರಿಯವರು ಶಹನಾಯಿ ವಾದನಕ್ಕೆ ಸವಣೂರು ನವಾಬನಿಂದ ಬೆಳ್ಳಿಯ ಶಹನಾಯಿಯನ್ನು ಬಹುಮಾನವಾಗಿ ಪಡೆದುಕೊಂಡಿದ್ದರು.
1664 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ಬೀಂಜಿ ಕೋಟೆಗೆ ಹೋಗುವಾಗ ಈ ನಗರಕ್ಕೆ ಭೇಟಿ ಕೊಟ್ಟಿದ್ದರೆಂದು ಇತಿಹಾಸ ಹೇಳುತ್ತದೆ.ವಿಜಾಪುರದ ಆದಿಲಶಾಹಿ ಅರಸರು ಈ ಊರನ್ನು ತಮ್ಮ ಮಗಳಿಗೆ ಬಳೆ ತೊಡಿಸುತ್ತಿದ್ದ ಬಳೆಗಾರನಿಗೆ ಉಂಬಳಿಯಾಗಿ ಕೊಟ್ಟಿದ್ದರಂತೆ,ಅದಕ್ಕಾಗಿ ಈ ಊರಿಗೆ ಬಾಂಗಡಿ ಕೋಟೆ ಎಂದೂ ಮುಂದೆ ಬಾಗಲಕೋಟೆಯೆಂದು ಹೆಸರಾಯಿತು ಎಂಬ ಪ್ರತೀತಿ ಇದೆ.

  ಬಾಗಲಕೋಟೆಯ ಇತಿಹಾಸ ಮತ್ತು ಸಂಸ್ಕೃತಿ ಅಭ್ಯಸಿಸಿದಾಗ ಇಲ್ಲಿ ಸರ್ವಧರ್ಮಿಯರು ಕೂಡಿ ಬಾಳಿ ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ ಕೀರ್ತಿ ಈ ನಗರಕ್ಕಿದೆ.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ಅಸಹಕಾರ ಚಳವಳಿ’ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಗಾಂಧೀಜಿಯವರು ಬಾಗಲಕೋಟೆಗೆ ಬಂದಿದ್ದರು.1921 ಮೇ 28 ರಂದು ಗಾಂಧೀಜಿಯವರು ಬಾಗಲಕೋಟೆಗೆ ಬಂದಾಗ ಆ ಕಾಲಕ್ಕೆ ಒಂದು ಸಾವಿರ ರೂ.ಗಳ ನಿಧಿಯನ್ನು ಅರ್ಪಿಸಲಾಗಿತ್ತು.
1931 ರಲ್ಲಿ ಪಂಡಿತ ಜವಾಹರಲಾಲ ನೆಹರೂ ಬಾಗಲಕೋಟೆಯ ಹಿಂದೂಸ್ಥಾನ ಸೇವಾದಳಕ್ಕೆ ಭೇಟಿಕೊಟ್ಟಿದ್ದರು.ಐತಿಹಾಸಿಕ ಸೇವಾದಳ ಕಟ್ಟಡ ಮುಳುಗಡೆಯಾಗಿ ಅದರ ಪ್ರತಿರೂಪ ನವನಗರದಲ್ಲಿ ನಿರ್ಮಿಸಲಾಗಿದೆ.ಸರ್ದಾರ್ ವಲ್ಲಭ ಬಾಯಿ ಪಟೇಲರು ಭಾಷಣ ಮಾಡಿದ ಜಾಗದಲ್ಲಿ ವಲ್ಲಭ ಬಾಯಿ ಚೌಕ ಕಟ್ಟಲಾಗಿದೆ,ಇದೂ ಎರಡನೆಯ ಹಂತದಲ್ಲಿ ಕೃಷ್ಣಾರ್ಪಣವಾಗಲಿದೆ.ಇವತ್ತು ಹಳೆ ಬಾಗಲಕೋಟ-ವಿದ್ಯಾಗಿರಿ-ನವನಗರವನ್ನು ಒಂದುಗೂಡಿಸುವ ಬೃಹತ್ತ ಸೇತುವೆ ಮತ್ತು  ರಸ್ತೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಸುಂದರಗೊಳಿಸಲಾಗಿದೆ.ಮರಾಠ ದೊರೆಗಳ ಕಾಲದಲ್ಲಿ ಕಟ್ಟಲಾಗಿದ್ದ ಶಿರೂರು ಅಗಸಿಯು ಮುಳುಗಡೆಯಾಗಲಿದ್ದು ,ಅದನ್ನು ಸಂಗಮ ಕ್ರಾಸ್ ಬಳಿ ಬೃಹತ್ತಾಗಿ ಕಟ್ಟಲಾಗುತ್ತಿದೆ.
ಮುಳುಗಡೆ ಊರಿನ ಹಿಂದಿನ ಸಂಸ್ಕೃತಿಯನ್ನು ಮರು ಸ್ಥಾಪಿಸಲು ಊರ ಜಾತ್ರೆ,ಹಬ್ಬ ಹರಿದಿನ,ಉರುಸು ,ಓಕಳಿ ,ಹೋಳಿ ಮೊದಲಾದವನ್ನು ನಗರದ ಯುವ ಜನಾಂಗ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ.

 –ಡಾ.ಪ್ರಕಾಶ ಗ.ಖಾಡೆ ,ಸೆಕ್ಟರ್ ನಂ.63,ನವನಗರ,ಬಾಗಲಕೋಟ -9845500890